ಆಯ್ದಕ್ಕಿ ಲಕ್ಕಮ್ಮ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಅಮರೇಶ್ವರ'ಗ್ರಾಮದ ದಲಿತ ಕುಟುಂಬದ ಸ್ವಾಭಿಮಾನಿ ಹೆಣ್ಣು. ಅವಳ ಪತಿ 'ಆಯ್ದಕ್ಕಿ ಮಾರಯ್ಯ'. 'ಬಡತನ'ವೆಂಬ ದಿವ್ಯ ಅನುಭವವೇ ಲಕ್ಕಮ್ಮನಲ್ಲಿ ಸೂಕ್ಷ್ಮ ಚಿಂತನೆ ಮತ್ತು ಗಾಂಭೀರ್ಯದ ಬದುಕನ್ನು ಕಲಿಸಿತು. ದಂಪತಿಗಳು ಬಸವಣ್ಣನವರ ತತ್ವಕ್ಕೆ, ವ್ಯಕ್ತಿತ್ವಕ್ಕೆ ಮಾರು ಹೋಗಿ, 'ಅಮರೀಶ್ವರಿ ಗ್ರಾಮದಿಂದ ಕಲ್ಯಾಣಕ್ಕೆ ಬಂದು ನೆಲೆಸಿದರು. ಕಾಯಕ ಮಾಡಿ, ಜನರಿಗೆ ನೀಡಿ ಬದುಕ ಬೇಕೆ ಹೊರತು, ಹೆಚ್ಚೆಚ್ಚು ಶೇಖರಿಸಿಡಬಾರದು ಎಂಬ ನಿಲುವಿನವಳು. ಆಕೆಯ ಅಂಕಿತನಾಮ 'ಮಾರಯ್ಯಾ ಪ್ರಿಯ ಅಮರೇಶ್ವರ ಲಿಂಗ'. == ಲಕ್ಕಮ್ಮನ ಪವಾಡ/ಶಿವನಿಷ್ಠೆ == ಲಕ್ಕಮ್ಮ 'ಹಿಡಿಯಕ್ಕಿ' ಯಿಂದಲೇ ಒಂದು ಲಕ್ಷದ ತೊಂಬತ್ತಾರು ಸಾವಿರದ ಜಂಗಮರಿಗೆ ಊಟ ನೀಡಿ ಬಸವಣ್ಣನವರಿಂದ "ಸೈ"ಎನಿಸಿಕೊಂಡವಳು. ಶರಣರೆಲ್ಲ ಆಕೆಯ ಪವಾಡಕ್ಕೆ ಮೂಕ ವಿಸ್ಮಿತ ರಾಗಿ 'ಭಕ್ತಿಯ ಮುಂದೆ ಎಲ್ಲವೂ ಮಿಥ್ಯ'ವೆಂದು ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ಒಮ್ಮೆ ಸಾಕ್ಷಾತ್ ಶಿವನೇ ಜಂಗಮ ರೂಪದಲ್ಲಿ ಬಂದು, ಅಸಾಧ್ಯ ಚಳಿಯನ್ನೂ ಸೃಷ್ಠಿಸಿ ನಡುಗುತ್ತಾ, ಶಿವಭಕ್ತರಾದ ಇವರಿಬ್ಬರು ಉಟ್ಟ ಬಟ್ಟೆಯೇ ಬೇಕೆಂದು ಕೇಳಿ ತೊಟ್ಟುಕೊಂಡು ಅವರ ಭಕ್ತಿಗೆ ಮೆಚ್ಚುಗೆ ಸೂಚಿಸಿದನಂತೆ. ಆಯ್ದಕ್ಕಿ ಲಕ್ಕಮ್ಮನ ವಚನಗಳಲ್ಲಿ ಆತ್ಮೋದ್ಧಾರ, ಲೋಕೋದ್ಧಾರ ಗಳೆಂಬ ದ್ವಿಮುಖ ಆಶಯ, ಕಾಯಕತತ್ವ, ನಿಶ್ಚಲ ನಿಲುವು, ಜ್ಞಾನದ ಅರಿವು, ಸಮತಾಭಾವ, ಇತರರ ಒಳ್ಳೆತನವನ್ನೇ ಪ್ರಶ್ನಿಸುವ ದಿಟ್ಟತನ, ಅತಿಯಾಸೆ ಒಳ್ಳೆಯದಲ್ಲವೆಂಬ ನಿಲುವು, ಆಕೆಯ ಅಚಲ ಆತ್ಮವಿಶ್ವಾಸ, ನಿರ್ಮಲ ವ್ಯಕ್ತಿತ್ವದ ಅನಾವರಣವಿದೆ. == ಲಕ್ಕಮ್ಮನ ವಿಶಿಷ್ಟವ್ಯಕ್ತಿತ್ವ == ಶರಣರ ಕಾಯಕ, ದಾಸೋಹಗಳ ನಿಜಸ್ವರೂಪವನ್ನು, ಜೀವನಮೌಲ್ಯವನ್ನು ತನ್ನ ಪತಿ ಮಾರಯ್ಯನಿಗೆ ಮನಗಾಣಿಸುವ ರೀತಿಯಿಂದಾಗಿ ಅವಳ ನಿಸ್ವಾರ್ಥ ಮನಸ್ಸು, ತತ್ವ್ತಸಿದ್ಧಾಂತಗಳ ಪ್ರಧ ತಿಳಿವು, ಧೈರ್ಯ ಧೀಃಶಕ್ತಿಗಳಿಂದಾಗಿ ಎಲ್ಲಾ ಕಾಲದ, ಎಲ್ಲಾ ವರ್ಗದ ಸ್ತ್ರೀಯರಿಗೆ ಮಾರ್ಗದರ್ಶಿಯಾಗಿದ್ದಾಳೆ. ಒಂದೊಂದು ಅಕ್ಕಿಯಕಾಳು ಪೋಲಾಗದಂತೆ ರಕ್ಷಿಸಬೇಕಾದ ಸಾಮಾಜಿಕ ಜವಾಬ್ದಾರಿಯತ್ತ ನಮ್ಮನ್ನು ಕರೆದೊಯ್ಯುತ್ತಾಳೆ. ಲಕ್ಕಮ್ಮನ ೨೫ ವಚನಗಳು ಲಭ್ಯವಾಗಿವೆ. == ಉಲ್ಲೇಖಗಳು ==